*ಹೋಟೆಲಿನಲ್ಲಿ ಇಂಗ್ಲಿಷ್ ಮಾತನಾಡುವವರನ್ನು ಕಂಡು ಮೂಕನಂತೆ ನೋಡುತ್ತಿದ್ದ ಯುವಕ ಈಗ ಸಾವಿರಾರು ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಸಿದ ಶಿಕ್ಷಣ ದಿಗ್ಗಜ* ಅವರು ಬಡತನದ ಬೇಗೆಯಿಂದ ಬಳಲುತ್ತಿದ್ದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. 7ನೇ ತರಗತಿಯಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗಕ್ಕಾಗಿ ಮುಂಬೈಗೆ ಹೊರಟು ಅಲ್ಲಿನ ಹೋಟೆಲುಗಳಲ್ಲಿ ಗ್ಲಾಸ್ ತೊಳೆದು ಸಂಪಾದನೆ ಮಾಡುತ್ತಿದ್ದ ಸಂದರ್ಭವದು. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಜನರನ್ನು ಕಂಡು ಮೂಕ ವಿಸ್ಮಿತನಂತೆ ನೋಡಿ ನಾವಷ್ಟು ಕಲಿಯಲಿಲ್ಲವಲ್ಲಾ ಎಂದು ಚಿಂತಿಸಿ ಬಡವರಿಗೆ ಶಿಕ್ಷಣದ ಬಗ್ಗೆ ಅಂದೇ ಮಸ್ತಕದಲ್ಲಿ ಯೋಜನೆ ಹಾಕಿಕೊಂಡ ವ್ಯಕ್ತಿ ಅವರು. ಅಂದು ಹಾಕಿದ ಯೋಜನೆಯ ಯೋಚನೆಯು ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದ ಆ ವ್ಯಕ್ತಿ ಮತ್ಯಾರೂ ಅಲ್ಲ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, “ಸರ್ಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿಯ ರಾಜ್ಯಾಧ್ಯಕ್ಷರು, ಸರ್ಕಾರಿ ಶಾಲೆ ಹೀಗೂ ಇರುತ್ತಾ ಎಂದು ಅಭಿವೃದ್ಧಿಯ ಶಕೆಯನ್ನು ಪಸರಿಸಿದ ಧೀಮಂತ ಅಕ್ಷರ ದಿಗ್ಗಜ ಪ್ರಕಾಶ್ ಅಂಚನ್… “ಹುಟ್ಟು ದರಿದ್ರ ಆದರೂ ಸಾವು ಚರಿತ್ರೆ ಆಗಬೇಕು” ಎಂಬ ಮಾತಿದೆ. ಅನೇಕ ಮಂದಿ ಬಡತನದಿಂದಲೇ ಹುಟ್ಟುತ್ತಾರೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾದ ಜನರು ಅದೆಷ್ಟೋ. ಇಂತಹಾ ಅನೇಕ ಮಂದಿಗೆ ಆದರ್ಶ ರೂಪವಾಗಿ ಕಂಗೊಳಿಸ...